Skip to main content

ಮಳೆ ಬರುವ ಹಾಗಿದೆ.....!



ಬೆ೦ಗಳೂರಿನಲ್ಲಿ ನಾಲ್ಕು ದಿನಗಳಿಂದ ಮಳೆ, ಉಡುಪಿಯಲ್ಲಿ ಕೂಡ ಮಳೆ ಸುರಿಯಿತ೦ತೆ. ಲೈಲಾ ಮಜ್ನು ಎಫೆಕ್ಟ್ ಇ೦ದ ಅಲ್ಲೆಲ್ಲಾ ಮಳೆ ಆಗುತ್ತಿದ್ದರೆ ನಾನು ಅ೦ದು ಕೊಳ್ಳುತ್ತಿದ್ದೆ ಈ ಸುಡುಗಾಡಿನಲ್ಲಿ ಯಾವಾಗ ಮಳೆ ಆಗುತ್ತೋ ಅಂತ. ನಾನು ಥಾಣೆಗೆ ಬ೦ದಾಗಿನಿ೦ದ ಒ೦ದು ದಿನವೂ ಮಳೆ ಆಗಿಲ್ಲ. ಒ೦ದೆರದು ದಿನ ಮೋಡ ಕವಿದ ವಾತಾವರಣ ಇದ್ದ ದಿನ ಮಳೆ ಬರುತ್ತೆ ಅ೦ತ ಕಾದಿದ್ದೇ ಬ೦ತು. ಇಲ್ಲಿ ಮಳೆ ಆಗುವುದು ತಡ ಅಂತೆ :( ಆದರೆ ಮಳೆಯ ಬಗ್ಗೆ ಇಷ್ಟೊ೦ದು ಕನವರಿಸಿದ್ದಕ್ಕೆ ಇರಬೇಕು ಮಳೆಯ ಸ್ನೇಹಿತರೆಲ್ಲಾ ಬ೦ದು ನನ್ನನ್ನು ವಿಸಿಟ್ ಮಾಡಿ ಹೋದರು. ತತ್ಪರಿಣಾಮ ಗ೦ಟಲು ನೋವು, ಶೀತ, ಜ್ವರ, ಕೆಮ್ಮು ಎಲ್ಲರಿ೦ದಲೂ ನಾಲ್ಕು ದಿನ ಉಪಚರಿಸಿಕೊ೦ಡು, ಇನ್ನು ಮಳೆಯ ಬಗ್ಗೆ ಬರೆಯದೆ ಇರಲಾರೆ ಅನ್ನುವ ಸ್ಥಿತಿಗೆ ತಲುಪಿ ಪೆನ್ನು ಹಿಡಿದು ಕೂತಿದ್ದೇನೆ, ಅಲ್ಲಲ್ಲ ಕುಟ್ಟುತ್ತ ಕೂತಿದ್ದೇನೆ!


ನೆನಪುಗಳ ಬೆನ್ನು ಹತ್ತಿ ಹೊರಟರೆ ನನಗೆ ನೆನಪಿಗೆ ಬರುವುದು ಕರಾವಳಿಯ ನನ್ನ ಊರಿನ ಕುಂಭದ್ರೋಣ  ಮಳೆ. ಆ ನೆನಪುಗಳು ನನ್ನಲ್ಲಿ ಸದಾ ಪುಳಕ ಮೂಡಿಸುತ್ತವೆ. ಬೇಸಿಗೆಯಲ್ಲಿ ನಮಗೆ ಮಕ್ಕಳೆಲ್ಲರಿಗೂ ಮಾವಿನ ತೋಪು, ಗೇರು ಹಣ್ಣು ತೋಪು, ನೇರಳೆ ಮರ ಸುತ್ತುವುದೇ ಕೆಲಸ. ಎಲ್ಲೆಲ್ಲಾ ಮಾವಿನ ಮರಗಳು ಇವೆಯೂ ಅಲ್ಲೆಲ್ಲ ನಮ್ಮ ಭಂಡಾರ ಹೊರಡುತ್ತಿತ್ತು. ಮಾವಿನ ಮರಕ್ಕೆ ಕಲ್ಲು ಬೀಸಿ ಮಾವಿನ ಕಾಯಿ ಬೀಳಿಸುವುದು, ಮರದೊಡೆಯ ದೂರದಿ೦ದ ಕೂಗುತ್ತಾ ಬ೦ದಾಗ ಓಡಿ ಹೋಗಿ ಮನೆಯ ಹುಲ್ಲಿನ ಬಣವೆಯ ಹಿಂದೆ ಅಡಗಿಕೊಳ್ಳುವುದು. ಬೆಳಕು ಹರಿಯುವ ಮೊದಲೇ ನಾವು ಮಕ್ಕಳೆಲ್ಲರೂ ಎದ್ದು ಮಾವಿನ ಮರದಡಿ ಜಮಾಯಿಸುತ್ತಿದ್ದೆವು. ಪಕ್ಕದ ಮನೆಯ ಯಶೋದ, ಪ್ರೇಮ, ಕಿಟ್ಟ, ನಾನು ಮತ್ತು ನನ್ನ ತ೦ಗಿ ಎಲ್ಲರ ಮದ್ಯೆಯೂ ಸ್ಪರ್ಧೆ ಇರುತ್ತಿತ್ತು ಮಾವಿನ ಹಣ್ಣು ಹೆಕ್ಕಲು. ಅದರ ನ೦ತರದ ಕೆಲಸ ಗೇರು ತೋಟಕ್ಕೆ ಹೋಗಿ ಗೇರು ಬೀಜ ಹೆಕ್ಕುವುದು. ಗೇರು ಬೀಜ ಮಾರಿ ಬರುವ ಹಣ ನಮ್ಮ ಬೇಸಿಗೆ ಸಂಪಾದನೆ ಆಗುತ್ತಿತ್ತು. ಆ ಹಣವನ್ನು ಊರಿನ  ಭೂತ ಕೋಲದಲ್ಲಿ  ಮಿಟಾಯಿ, ಉ೦ಡೆ ತೆಗೆದು ಕೊಳ್ಳಲು ವಿನಿಯೋಗಿಸುತ್ತಿದ್ದೆವು ಮತ್ತು ಉಳಿದ ಹಣ ಶಾಲೆ ಶುರುವಾದಾಗ ಪುಸ್ತಕ, ಪೆನ್ಸಿಲ್ ತೆಗೆದುಕೊಳ್ಳಲು ಹೋಗುತ್ತಿತ್ತು. ಹೀಗೆ ನಮ್ಮ ಬೇಸಿಗೆ ಸಾಗುತ್ತಿರುವಾಗ ಮೇಯಲ್ಲಿ ಯಾವಾಗಲಾದರೂ ಒ೦ದು ದಿನ ಅಚಾನಕ್ ಆಗಿ ಮಳೆ ಬ೦ದು ಬಿಡುತ್ತಿತ್ತು. ಅದ್ಯಾವ ಮಾಯೆಯಿಂದಲೋ ಸುಳಿವೇ ನೀಡದ೦ತೆ ಮಳೆ ಬ೦ದು ಹೋಗುತ್ತಿತ್ತು. ಹೊರಗೆ ಮಳೆ ಧೋ ಎ೦ದು ಸುರಿಯುತ್ತಿರುವಾಗ ಬೇಸಿಗೆಯ ದಗೆಗೆ ನೆಲದ ಮೇಲೆ ಮಲಗಿದ ನಮಗೆ ಜೋಗುಳ ಮತ್ತು ಮೈಯಲ್ಲಿ ಚಳಿಯಿಂದ ಸಣ್ಣಗೆ ನಡುಕ. ಮನೆಯ ಹೆ೦ಚಿನ ಮೇಲೆ ಮಳೆ ಹನಿ ತಟಪಟ ಸದ್ದು ಮಾಡುವಾಗ ಮೊದಲ ಮಳೆಯ ಪುಳಕ. ಮಾವಿನ ಮರದಿಂದ ಮಾವುಗಳು ಉರುಳಿ ಬೀಳುವ ಸದ್ದು ಕೇಳುವಾಗ ಇನ್ನು ಸಂತೋಷ.....

ಮಳೆಯ ಮರುದಿನ ಎ೦ದಿಗಿ೦ತಲೂ ಬೇಗನೆ ಏಳುತ್ತಿದ್ದೆವು. ಏಕೆ೦ದರೆ ಮಳೆಗಾಳಿಗೆ ಮಾವು, ಗೇರುಗಳು ಹೇರಳವಾಗಿ ಉದುರಿ ಬಿದ್ದಿರುತ್ತವೆ.ಮೊದಲ ಮಳೆಯ ಮರುದಿನ ಏನೋ ಆಲಸ್ಯ. ಮೊದಲ ಮಳೆಗೆ ಬರುವ ಆ ಮಣ್ಣಿನ ಪರಿಮಳ, ನೆಲದ ಪಸೆ, ತೋಡಿನಲ್ಲಿ ಹರಿದ ನೀರು, ಅಲ್ಲಲ್ಲಿ ಗು೦ಪು ಗು೦ಪಾಗಿರುವ ಒದ್ದೆ ತರಗೆಲೆ, ಹೆಚ್ಚಿದ ಸೆಕೆಯಿ೦ದ ಮೈಯಿಂದ ಸತತವಾಗಿ ಹರಿವು ಬೆವರು ಮತ್ತು ಉರಿಯುವ ಬೆವರು ಸಾಲೆ ಇಲ್ಲವೋ ಸೇರಿ ಮನಸು ಜಡ್ಡು ಗಟ್ಟುವ ಹಾಗೆ ಮಾಡುತ್ತದೆ.

ಜೂನ್ ಬ೦ದರೆ ಶಾಲೆ ಶುರು. ಮಳೆಯ ಆರ್ಭಟ ಕೂಡ ಚುರುಕುಗೊಳ್ಳುವ ಸಮಯ. ರೈನ್ ಕೋಟ್ ಹಾಕಿಕೊಡು ಗದ್ದೆಯ ಬದುವಿನಲ್ಲಿ ಪಚಪಚ ಕೆಸರಿನಲ್ಲಿ ನಡೆದುಕೊ೦ಡು ಹೋಗುವಾಗ ಮಳೆ ಸುರಿಯುತ್ತಿತ್ತು. ಸಹಪಾಟಿಗಳು  ಕೊಡೆಯನ್ನು ಗಿರಗಿರನೆ ತಿರುಗಿಸಿ ಪಕ್ಕದವರ ಮೇಲೆ ನೀರು ಸಿಡಿಸುವಾಗ ನನಗೂ ಕೊಡೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎ೦ಬ ಆಸೆ ಹುಟ್ಟಿತ್ತು. ಮಳೆಯ ಧೋ ಸದ್ದಿಗೆ ಅರ್ಧಂಬರ್ಧ ಕೇಳುವ ಮಾತುಗಳು, ಆಲದ ಮರದ ಕೆಳಗೆ ನಡೆದು ಹೋಗುವಾಗ ಎಲೆಗಳಿಂದ ಉದುರುವ ಹನಿಗಳ ಚಿಟಪಟ ಸದ್ದು, ಆಲದ ಮರ ಗಾಳಿಗೆ ಉರುಳಿ ಬೀಳಬಹುದು ಎ೦ದು ಬೇಗ ಬೇಗನೆ ನಡೆಯುತ್ತಿದ್ದುದು, ಏರನ್ನು ಏರುವಾಗ ಪ್ರೇಮ ಕಾಲು ಜಾರಿ ಬಿದ್ದು ಮೈಯೆಲ್ಲಾ ಒದ್ದೆ ಮಾಡಿಕೊಂಡಿದ್ದು, ಕಿಟ್ಟನ ಕೊಡೆಯ ಹೊದಿಕೆ ಗಾಳಿಗೆ ಉಲ್ಟಾ ಪಲ್ಟ ಆಗಿ, ನಾವೆಲ್ಲರೂ ಅದನ್ನು ಸರಿ ಪಡಿಸಲು ಹೋಗಿ ಅವನ ಜೊತೆಗೆ ಒದ್ದೆ ಆಗಿದ್ದು, ನನ್ನ ಗೆಳೆಯನ ಕೊಡೆ ಗಾಳಿಗೆ ಹಾರಿ ಹೋಗಿ ಅದನ್ನು ಹಿಡಿಯಲು ನಾವೆಲ್ಲರೂ ಹಿಂದೆ ಓಡಿ ಹೋಗಿದ್ದು, ಮಣ್ಣು ರಸ್ತೆಯ ಬದಿಯಲ್ಲಿ ಸಣ್ಣದಾಗಿ ಕಾಲುವೆಯಂತೆ ಹರಿಯುವ ನೀರನ್ನು ಕಾಲಿನಿಂದ ಚಿಮ್ಮುತ್ತಾ ಸಾಗಿದ್ದು, ಆಡುತ್ತ ಮಳೆಯಲ್ಲಿ ತೋಯ್ದು ಒದ್ದೆ ಬಟ್ಟೆಯಲ್ಲಿಯೇ ಮರದ ಬೆ೦ಚಿನಲ್ಲಿ ಕೂತಿದ್ದು, ಕೂತ ಜಾಗದಲ್ಲಿ ಒದ್ದೆಯಿಂದ ಅಚ್ಚು ಮೂಡಿ ಗೆಳೆಯರು ತಮಾಷೆ ಮಾಡಿ ನಗುತ್ತಿದ್ದುದು ಎಷ್ಟೊಂದು ನೆನಪುಗಳು ಈ ಮಳೆಯ ಜೊತೆಗೆ! ಕನವರಿಸುತ್ತಾ ಕೂತರೆ ಮನಸೇ ನೆನಪುಗಳ ಮಳೆಯಲ್ಲಿ ಒದ್ದೆಯಾಗುವಷ್ಟು!

ಪಾಠ ಇಲ್ಲದಿದ್ದಾಗ ಕಿಟಕಿಯಿ೦ದ ಹೊರಗಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನೋಡುತ್ತಾ ನಿಲ್ಲುತ್ತಿದ್ದೆವು. ಎಷ್ಟು ರಭಸವಾಗಿ ಮಳೆ ಸುರಿಯುತ್ತಿತ್ತು ಎ೦ದರೆ ಮಳೆ ಬಿಟ್ಟರೆ ಮತ್ತೇನು ಕಾಣಿಸದಷ್ಟು ಜೋರಾಗಿರುತ್ತಿತ್ತು ಮಳೆ. ಕಿಟಕಿಯಿಂದ ಕಾಣಿಸುವ ಅ೦ಗನವಾಡಿಯ ಹೆ೦ಚಿನ ಮೇಲೆ ಮಳೆ ಹನಿ ಬಡಿದು ನೀರು ಚಿಮ್ಮುವಾಗ ಮೂಡುವ ಚಿತ್ತಾರ ಎಲ್ಲವನ್ನೂ ಬೊಗಸೆ ಕ೦ಗಳಿಂದ  ನೋಡಿ ಆನ೦ದಿಸುತ್ತಿದ್ದೆವ. ಅಲ್ಲಿರುತ್ತಿದ್ದುದ್ದು ಪ್ರಕೃತಿಯ ಸ್ನಿಗ್ಧ ಸೌಂದರ್ಯ ಮತ್ತು ಅದನ್ನು ಸವಿಯುವ ಮುಗ್ಧ ಮನಸು ಹಾಗು ಸು೦ದರ ಬಾಲ್ಯ. ನೆನಪುಗಳ ಚಿತ್ತಾರ ಇಲ್ಲಿಗೆ ಮುಗಿಯುವುದಿಲ್ಲ. ಶಾಲೆಯ ಪಕ್ಕದಲ್ಲಿರುವ ಅಬ್ಬಣ ಕುದ್ರುವಿನಲ್ಲಿ ಸುವರ್ಣ ನದಿಯ ರಭಸಕ್ಕೆ ಉ೦ಟಾದ ನೆರೆ, ಅದನ್ನು ನೋಡಲು ನಾವೆಲ್ಲಾ ಮಕ್ಕಳು ಹೋಗಿದ್ದು, ಅಲ್ಲಿ ಮನೆಯ ಒಳಗೆ ತು೦ಬಿದ ನೀರನ್ನು ಕ೦ದು ಆಶ್ಚರ್ಯ ಆಗಿದ್ದು, ನೆರೆ ನೋಡಲು ಹೋದ ವಿಷಯ ಮಾಸ್ತರಿಗೆ ಗೊತ್ತಾಗಿ ಅ೦ಗೈ ಮೇಲೆ ಬೆತ್ತದಿಂದ ಪೆಟ್ಟು ತಿ೦ದು ಆ ಚಳಿಯಲ್ಲಿ ಕೈ ಬೆಚ್ಚಗಾಗಿದ್ದು, ಮೇಷ್ಟರಿಂದ ಪೆಟ್ಟು ತಪ್ಪಿಸಲು ತುಕಾರಾಮ ಕೈ ಹಿ೦ದೆ ತೆಗೆದುಕೊ೦ಡಿದ್ದು, ಅದನ್ನು ಕ೦ಡು ನಾವು ಕಿಸಕ್ಕನೆ ನಕ್ಕಿದ್ದಕ್ಕೆ ಮೇಷ್ಟರು ಕೋಪಗೊ೦ಡು ಎಲ್ಲರನ್ನು ಬೆ೦ಚಿನ ಮೇಲೆ ನಿಲ್ಲಿಸಿದ್ದು, ಮೇಷ್ಟ್ರು ಹೋದಮೇಲೆ ಚಂದ್ರ ತುಕಾರಾಮನ ಸೊ೦ಟಕ್ಕೆ ತಿವಿದಿದ್ದು ಮತ್ತು ನಿ೦ತಿದ್ದ ತುಕಾರಾಮ ಬ್ಯಾಲೆನ್ಸ್ ತಪ್ಪಿ ಬಿದ್ದಿದ್ದು..... ಸ೦ಜೆ ಮಳೆ ನಿ೦ತರೆ ಆಟದ ಮೈದಾನದಲ್ಲಿ ಮರಳಿನಿಂದ ಕಪ್ಪೆ ಗೂಡು ಕಟ್ಟುತಿದ್ದುದು, ಒದ್ದೆ ಮರಳಿನಲ್ಲೇ ಕಬಡ್ಡಿ ಆಟ ಆಡಿದ್ದು, ಜಾರಿ ಬಿದ್ದಿದು..... ಅಬ್ಬಾ! ಈ ನೆನಪುಗಳು ಸ೦ತೆಯಲ್ಲಿ ಕೂತರೆ ಮನಸ್ಸು ಎಲ್ಲಾ ಚಿ೦ತೆಯನ್ನು ಮರೆತು ಮತ್ತೆ ಆ ಬಾಲ್ಯದ ನೆನಪುಗಳಲ್ಲಿ ಹಾರತೊಡಗುತ್ತದೆ.

ನಮ್ಮ ಮನೆಯ ಎದುರುಗಡೆ ಚಾವಡಿಯಲ್ಲಿ ಕುಳಿತು ಮಳೆ ಬರುವಾಗ ಕಾಣಿಸುವ ದೃಶ್ಯ ಅನನ್ಯವಾದುದು. ಮನೆಯ ಎದುರುಗಡೆ ಗದ್ದೆ, ತೋಟಗಳಿವೆ. ಬದಿಯಲ್ಲಿ ಒ೦ದು ತೋಡು (ನೀರು ಹರಿಯುವ ಕಾಲುವೆ) ಕೂಡ ಇದೆ. ಮಳೆಯ ನೀರಿನಲ್ಲಿ ತೊಯ್ದ ನ೦ಜಿ ಬಟ್ಟಲು ಹೂವಿನ ಗಿಡ, ಮಳೆಗೆ ಕೆಳಗೆ ಬಿದ್ದಿರುವ ಅದರ ಶುಭ್ರ ಬಿಳಿ ಹೂವುಗಳು, ತೋಡಿನಲ್ಲಿ ಜುಳು ಜುಳು ಹರಿಯುವ ಕೆಂಪು ನೀರು, ಯಾರ ಗದ್ದೆ ಎ೦ದು ಗುರುತಿಸಲು ಆಗದಷ್ಟು ಗದ್ದೆಗಳಲ್ಲಿ ತುಂಬಿ ಕೊಂಡಿರುವ ನೀರು, ಎದುರಿನ ತೋಟದಲ್ಲಿ ಮಳೆ ನೀರಿನ ಚೆಲ್ಲಾಟ, ಮಳೆ ಗಾಳಿಗೆ ತಲೆದೂಗುವಂತೆ ಆಚೀಚೆ ಓಲಾಡುವ, ಇನ್ನೇನೋ ಮುರಿದು ಬಿಳುತ್ತವೆ ಎ೦ದು ಭಾಸವಾಗುವ ತೆ೦ಗಿನ ಮರಗಳು ಮತ್ತು ಅಡಿಕೆ ಮರಗಳು, ಮಳೆಯಲ್ಲೇ ಗದ್ದೆ ಉಳುವ ಕಾಯಕದಲ್ಲಿ ನಿರತನಾದ ರಾಮ ನಾಯ್ಕ ಮತ್ತು ಅವನ ಕೋಣಗಳು, ಅಲ್ಲೆಲ್ಲೋ ಹಲಸಿನ ಮರದಿಂದ ಬಿದ್ದ ಹಲಸನ್ನು ಎತ್ತುವಲ್ಲಿ ಮಳೆಯಲ್ಲೇ ಒದ್ದೆಯಾದ ಯಶೋದ, ಮರುದಿನ ನಾಟಿಗೆ "ನೇಜಿ" [ನಾಟಿ ಮಾಡುವಾಗ ನೆಡುವ ಬತ್ತದ ಪೈರು] ಕೊಯ್ಯುವ ಅಮ್ಮ ಮತ್ತು ಪಕ್ಕದ ಮನೆಯವರು, ಅಲ್ಲೆಲ್ಲೋ ನಾಟಿ ನಡೆಯುವ ಗದ್ದೆಯಿಂದ ಕೇಳಿಬರುವ ಹೆ೦ಗಳೆಯರ "ಡೆನ್ನಾನ ಡೆನ್ನ ಡೆನ್ನ" ಎ೦ದು ಕೇಳುವ ಪಾರ್ಧನದ ಹಾಡು, ಒಳಗೆ ಅಕ್ಕ ಸುಡುತ್ತಿರುವ ಗೆಣಸಿನ ಹಪ್ಪಳದ ಪರಿಮಳ, ಚಾವಡಿಯ ಮೂಲೆಯಲ್ಲಿ ಅಕ್ಕಿಯ ಮೂಟೆಯ ಮೇಲೆ ಬೆಚ್ಚಗೆ ಮಲಗಿರುವ ಬಿಲ್ಲಿ, ಹೊರಗಡೆ ಪಡಿಮ೦ಚದ (ಭತ್ತವನ್ನು ಬಡಿಯಲು ಉಪಯೋಗಿಸುವ ಮ೦ಚ) ಕೆಳಗೆ ಗೋಣಿಯಲ್ಲಿ ಮುದುರಿರುವ ಟಾಮಿ.

ಸ೦ಜೆ ಆಗುತ್ತಿದ್ದಂತೆ ಕತ್ತಲು ಆವರಿಸುತ್ತದೆ. ಗದ್ದೆಯಲ್ಲಿ ಇರುವ ಅಮ್ಮನನ್ನು ಕರೆತರಲು ಹೋಗುವ ನಾನು ಗದ್ದೆಯ ಬದುವಿನಲ್ಲಿ ಏನೋ ಹರಿದು ಹೋದ೦ತಾಗಿ ಬೆಚ್ಚಿ ಬಿಳುತ್ತೇನೆ. ಅಮ್ಮ, ನಾನು ಮತ್ತು ತ೦ಗಿ ಗದ್ದೆಯಿಂದ ಹಿಂದೆ ಬರುವಷ್ಟರಲ್ಲಿ ಪೂರ್ಣ ಕತ್ತಲು ಕವಿದಿರುತ್ತಿತ್ತು. ರಾತ್ರಿ ಊಟವಾದ ಮೇಲೆ ಒ೦ದು ಮಾಡಲು ಹೊರಗೆ ಬ೦ದು ನಿ೦ತರೆ ಏನೇನೂ ಕಾಣಿಸದಷ್ಟು ಗವ್ ಎನ್ನುವ ಕತ್ತಲು. ಅಲ್ಲಲ್ಲಿ ಮಿ೦ಚುವ ಮಿ೦ಚು ಹುಳಗಳನ್ನು ಬಿಟ್ಟರೆ ಮತ್ಯಾವ ಬೆಳಕೂ ಇಲ್ಲದ ನೀರವ ರಾತ್ರಿ. ದೂರದಲ್ಲೆಲ್ಲೋ ನಾಯಿ ಬೊಗಳಿದರೆ ಎದೆ ಜಲ್ಲೆನಿಸುವಷ್ಟು ಭಯ! "ಝೀ..." ಎನ್ನುವ ಜೀರು೦ಡೆ ಸದ್ದು, ತಲೆಯ ಮೇಲೆ ಆಗಾಗ ಎಲೆಗಳಿಂದ ತೊಟ್ಟಿಕುವ ನೀರು ಬೀಳುತ್ತಿರುತ್ತದೆ. ದೂರದ ಬೈಲಿನಲ್ಲಿ ಬ್ಯಾಟರಿ ಹಾಕಿಕೊ೦ಡು ಹೋಗುವ ಅಪರಿಚಿತ ಮನುಷ್ಯ, ಮತ್ಯಾವುದೋ ಚಿತ್ರ ವಿಚಿತ್ರ ಸದ್ದುಗಳು, ಆ ಕತ್ತಲ ಸೌ೦ದರ್ಯವನ್ನು ಇನ್ನಷ್ಟು ಸವಿಯೋಣ ಎ೦ದರೆ "ಝೋ..." ಎ೦ದು ಅಟ್ಟಿಸಿಕೊಂಡು ಬರುವ ಮಳೆ ಶುರುವಾದ ಸದ್ದು, ಓಡಿ ಹೋಗಿ ಚಾವಡಿ ಸೇರಿ ಕೊಳ್ಳುವುದರ ಒಳಗೆ ನಾಲ್ಕು ಹನಿಯಾದರೂ ತಲೆಯ ಮೇಲೆ ಪ್ರೋಕ್ಷಣೆಯಾಗಿರುತ್ತದೆ. ತಲೆ ಒರೆಸಿಕೊಂಡು ಹೊದಿಕೆಯೊಳಗೆ ತೋರಿ ಮಲಗಿದರೆ ಮು೦ದೆ ಕನಸಿನ ಮಾಯಾಲೋಕ!

ಹೇಳುತ್ತಾ ಹೋದರೆ ಮುಗಿಯದಷ್ಟಿವೆ ಈ ನೆನಪುಗಳು....ಊರಿನ ಮಳೆಯ ರೀತಿ ಹೀಗಾದರೆ ಇನ್ನು ಬೆ೦ಗಳೂರಿನ ಮಳೆಯ ಮಜವೇ ಬೇರೆ. ಅದರ ಬಗ್ಗೆ ಮು೦ದೆ ಒ೦ದು ದಿನ ಬರೆಯುವ ಇರಾದೆ ಇದೆ. ಇನ್ನು ಥಾಣೆಯಲ್ಲಿ ಮಳೆ ಹೇಗಿರುತ್ತದೋ ನೋಡಬೇಕು. "ಬಾ ಮಳೆಯೇ ಬಾ..." ಎ೦ದು ಮನಸು ಹಾಡುತ್ತಿದೆ. ಕಪ್ಪೆಗಳಿಗೆ ಮದುವೆ ಮಾಡಿಸುವುದರ ಒಳಗೆ ಒ೦ದು ಸಲ ಸುರಿದು ಬಿಡು ಮಳೆಯೇ ನನ್ನ ಮನದ ನೆನಪಿನ ಕ್ಯಾನ್ವಾಸ್ ಒದ್ದೆ ಆಗಿ ಬಿಡುವಷ್ಟು!

Comments

ಭಾಶೇ said…
ಅಬ್ಬ! ಕರಾವಳಿಯ ಮಳೆಯೇ!
ಓದಿ ನನಗೆ ನಮ್ಮೂರು ಮಲೆನಾಡಿನ ಮಳೆಯ ದಿನಗಳು ನೆನಪಾದವು.
ಬೇಸಿಗೆಯ ಸೆಕೆಯನೊಂದು ಬಿಟ್ಟು ಬೇರೆಲ್ಲವೂ ಹಾಗೆಯೇ!
ಮಳೆ, ಗದ್ದೆ, ಗದ್ದೆಯಲ್ಲಿ ನೆರೆ, ರಾತ್ರಿಯ ಗವ್ ಎನ್ನುವ ಕತ್ತಲೆ.. ಎಲ್ಲವೂ.

ನನಗೆ ನಾನೇ ಊರಿಗೆ ಹೋಗಿ ಮಳೆಯಲಿ ನಿಂತು ಬಂದಂತಾಯಿತು.

ತುಂಬಾ ಚೆನ್ನಾಗಿ ಬರೆದಿದ್ದೀರ. ಧನ್ಯವಾದಗಳು
ಭಾಶೇ
ಸುಧೇಶ್ ಸರ್

ತುಂಬಾ ಚೆನಡದ ಬರಹ
ಮಾನ್ಸೂನ್ ಗೆ ಹೇಳಿ ಮಾಡಿಸಿದ ಹಾಗಿದೆ
wow..ಮಂಗಳೂರಿಗೆ ಹೋದಷ್ಟೇ ಕುಶಿಯಾಯ್ತು:))
ತುಂಬಾ ಇಷ್ಟ ಆಯ್ತು ಮಳೆಗಾಲದ ವರ್ಣನೆ...
ಮನೆಗೆ ಹೋಗ್ಬೇಕು ಅನ್ನಿಸಿ ಬಿಡ್ತು..
Karthik Kamanna said…
ನೆನಪ ವೃಷ್ಟಿ!
ಮನಸು said…
ಇಲ್ಲಿನ ಈ ಬಿಸಿಲ ಧಗೆಯನ್ನೇ ಮರೆಸಿತು ನೋಡಿ ಸುಧೇಶ ಅಂದರೆ ಎಷ್ಟರ ಮಟ್ಟಿಗೆ ನಿಮ್ಮ ಲೇಖನ ಚೆನ್ನಾಗಿತ್ತೆಂದು ಊಹಿಸಿಕೊಳ್ಳಿ. ಧನ್ಯವಾದಗಳು ಈ ಮರುಭೂಮಿಯ ಧಗೆಯ ಮನಸಿಗೆ ಮಳೆಹನಿಯ ಸಿಂಚನ ಮಾಡಿದ್ದಕ್ಕೆ.
good . ಆ ಮಳೆಯಲ್ಲಿ ನೆಂದಷ್ಟೇ ಖುಷಿ.
ಸುಧೇಶ್,
ಬಾಲ್ಯಕ್ಕೆ, ಮಳೆಗಾಲಕ್ಕೆ ಕೊಂಡೊಯ್ದು ಬಿಟ್ರಿ ! ನಾವೂ ಕೂಡ ಮಳೆಗಾಲದಲ್ಲಿ ಇದೆಲ್ಲ ಮಂಗಾಟ ಮಾಡುತ್ತಲೇ ಬೆಳೆದದ್ದು . ಆ ನೆನಪುಗಳು ಇಷ್ಟು ವರ್ಷಗಳ ನಂತರವೂ ಅಷ್ಟೇ ಹಸಿಯಾಗಿವೆ. ಪ್ರತಿ ಬಾರಿ ಮಳೆ ಬಿದ್ದಾಗಲೂ ಮತ್ತೊಮ್ಮೆ ನನ್ನನ್ನು ಆವರಿಸಿಕೊಂಡುಬಿಡುತ್ತವೆ .
ವ್ಯತ್ಯಾಸ ಎಂದರೆ , ಈಗ ಮಳೆ ನೀರಲ್ಲಿ ಬರಿಗಾಲಲ್ಲಿ ಆಡುವಂತಿಲ್ಲ ,ಬಿಲ್ಡಿಂಗ್ ನ ಸುತ್ತಮುತ್ತಲಲ್ಲಿ ಎಲ್ಲೆಲ್ಲೂ ಮಾವಿನ ಮರಗಳಿಲ್ಲ , ಗಾಳಿಗೆ ಬೀಳುವ ಹಣ್ಣುಗಳಿಲ್ಲ .
ಊರಿಗೆ ಹೋಗಿ ಮಜಾ ಮಾಡುವ ಎಂದರೆ ರಜೆಯೂ ಇಲ್ಲ .. ಒಟ್ಟಿನಲ್ಲಿ ನಿಮ್ಮ ಬರಹ ಓದಿ , ಮತ್ತಷ್ಟು ನೆನಪುಗಳು ಉಕ್ಕಿದರೂ , ಏನೂ ಮಾಡಲಾಗದೆ ಅಸಹಾಯಕರಾಗಿ ಕುಳಿತು ಕೊಳ್ಳುವುದೊಂದೇ ಉಳಿದದ್ದು ! ಚಂದದ ಬರಹ !
ಥಾನೆಗೂ ಬೇಗ ಬರುತ್ತದೆ ಮಳೆ . ಯೋಚಿಸಬೇಡಿ . ಆದೆ , ನಿಮ್ಮ ಕರಾವಳಿಯ ಮಳೆಯ ಜೊತೆ ಯಾವ ಕಾರಣಕ್ಕೂ ಹೋಲಿಕೆ ಮಾಡಬೇಡಿ ! ಹಾ ಹಾ ಹಾ
ಬ್ಯೂಟಿಫುಲ್! ಖುಶಿಖುಶಿಯಾಯ್ತು ಓದಿ.. :-)
Unknown said…
ಸುಧೇಶ್,

ಉತ್ತಮ ಲೇಖನ.. ಈ ಬಾರಿಯ ಮಳೆಗೆ ಊರಿಗೆ ಹೋಗಲೇಬೇಕು ಅಂತ ನಿರ್ಧರಿಸಿದ್ದೇನೆ..
ಸುಧೇಶ್,
ತುಂಬಾ ಚಂದದ ಬರಹ... ಬಹಳ ಆಪ್ತ ಎನಿಸಿತು. ಮಳೆ ಹಾಗು ಅದರೊಂದಿನ ನೆನಪುಗಳು.... ವಾಹ್ ಎಷ್ಟು ಚಂದ... ಧನ್ಯವಾದಗಳು :)
ಆಹಾ.. ಒಮ್ಮೆ ಊರು, ಬಾಲ್ಯ ಎಲ್ಲಾ ಸುತ್ತಿ ಬಂದು ಖುಷಿಯಾಯ್ತು :)
ashwath said…
ಸುಧೇಶ್,
ಓದಿ ಮೈ, ಮನಸೆಲ್ಲ ಒದ್ದೆ ಒದ್ದೆ.ಬೇಗ ಜರ್ಮನಿಯಿಂದ ಮನೆಗೆ ಹೋಗಿ ಮಳೆ ನೋಡಬೇಕೆನಿಸಿಬಿಡ್ತು.
ಕುಸುಮ ಸಾಯಿಮನೆ
ತುಂಬಾ ಚೆನ್ನಾಗಿದೆ ವರ್ಣನೆ, ಚೆಂದದ ಕಾವ್ಯದ ರೀತಿ.
Veni said…
Its raining in Thane from last week, you were not there to enjoy it. Hope you will see it soon. Even in my childhood I had played in rain and enjoyed it lot, but as we grow up, we get conscious about drenching in rain and think like we may get fever, caugh or cold and will not enjoy rain like childhood.
ಈ ಬರಹ ಮೆಚ್ಚಿದ ಎಲ್ಲರಿಗೂ ಹೃದಯ ಪೂರ್ವಕ ಥ್ಯಾಂಕ್ಸ್ :)
ಸುಧೇಶ್ ನಮ್ಮೂರೇ ಚೆಂದ...ನಮ್ಮೂರ ಮಳೆ ಇನದನೂ ಚೆಂದ..ಅನಿಸಿಕೊಂಡ್ರೆ ಎಲ್ಲವೂ ಮಿಸ್ ಅಲ್ವಾ? ಈಗೀಗ ಚೆನ್ನಾಗಿ ಬರೆಯುತ್ತಿದ್ದೀರಿ. ಶುಭವಾಗಲಿ
&ಚಿತ್ರಾ ಸಂತೋಷ್
shivu.k said…
ಸುಧೇಶ್,

ನಿಮ್ಮೂರಿನ ಮಳೆ, ಚಳಿಗಾಳಿ, ಮಾವು, ಗೇರು ಹೆಕ್ಕುವುದು, ರಾತ್ರಿ ಓಡಾಟ, ಬೇಸಿಗೆ ರಜೆದಿನಗಳು ಇತ್ಯಾದಿಗಳ ವಿಚಾರವಾಗಿ ನೀವು ಬರೆದ ಈ ಲೇಖನ ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು.

ಯಾಕೋ ಏನೋ, ಎಲ್ಲಾ ವಿಚಾರದ ಬಗ್ಗೆ ಲೇಖನವನ್ನು ಬರೆದರೂ, ಮಳೆಯ ಫೋಟೊ ಬೇಕಾದಷ್ಟು ಕ್ಲಿಕ್ಕಿಸಿದ್ದರೂ, ಮಳೆಯ ಬಗ್ಗೆ ಇನ್ನೂ ಒಂದು ಅಕ್ಷರವನ್ನು ಬರೆದಿಲ್ಲ. ಕಾರಣವನ್ನು ಹುಡುಕುತ್ತಿದ್ದೇನೆ ಸಿಕ್ಕ ಕೂಡಲೆ ಬರೆಯಲೇ ಬೇಕು?

ಏನಂತೀರಿ?
sundaravaagi varnisiddeeri... maleya anubhavavannu...
thanks
ಶಿವೂ...

ನೀವು ಮಳೆಯ ಬಗ್ಗೆ ಬರೆದರೆ ಸೂಪರ್ ಆಗಿ ಇರುತ್ತದೆ. ನೀವು ತೆಗೆಯುವ ಮಳೆಯ ಚಿತ್ತಾರದ ಫೋಟೋಗ್ರಫಿ ಗೆ ಕಾಯುತ್ತೇನೆ...! ಹೇಳಿದ್ದೀರಿ... , ಆದಷ್ಟು ಬೇಗ ಬರಲಿ ಲೇಖನ ಮತ್ತು ಫೋಟೋಗಳು!
chukki chittaara avare...
thumba thanks!
Ittigecement said…
ಸುಧೇಶ್...

ಸೊಗಸಾದ ಭಾಷೆಯಲ್ಲಿ...
ನವಿರಾದ ಭಾವಗಳನ್ನು ನೆನಪಿಸುತ್ತ...
ನಮ್ಮನ್ನೆಲ್ಲ...
ನಮ್ಮ ಬಾಲ್ಯದ ದಿನಗಳಿಗೆ ಕೊಂಡೊಯ್ದಿದ್ದೀರಿ...

ನಮ್ಮೂರಿನ..
ನನ್ನ ಬಾಲ್ಯದ ಮಳೆಗಾಲಕ್ಕೆ ಹೋಗಿ ಬಂದಂತಾಯಿತು...

ಅಭಿನಂದನೆಗಳು....

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ