Skip to main content

ಆತ ಮತ್ತು ನಾನು.....

ದಿನಾ ಸಾಗುವಾಗ ಎದುರುಗೊಳ್ಳುವ
ಅವೇ ಪರಿಚಿತ ಮುಖಗಳು...
ಆದರೂ ನಾವು ಅಪರಿಚಿತರು.
ಪರಸ್ಪರ ಎದುರಾದಾಗ ನಗಬೇಕೆ೦ದುಕೊ೦ಡರೂ,
ಆ ನಗುವ ಆತನ ಮುಖದಲ್ಲಿ ಹುಡುಕುತ್ತೇನೆ.
ಬಹುಶಃ ಆತ ಅದನ್ನು ನನ್ನ ಮುಖದಲ್ಲಿ ಹುಡುಕುತ್ತಾನೇನೋ...

ದಿನವೂ ಹೀಗೆಯೇ,
ಆತನ ಮೊಗದಲ್ಲಿ ನನ್ನ ನಗುವ ಪ್ರತಿಬಿ೦ಬ
ಹುಡುಕಿ ಸೋಲುತ್ತೇನೆ
ನಗದಿರಲು ಹೇತುವಾದ
ನನ್ನೊಳಗಿನ ಅಹ೦ ನನ್ನನ್ನು ಖ೦ಡಿಸಿದರೂ
ಮುಖವರಳಿಸಿ ನಗಲಾರೆ ನಾನು
ಆತನೂ ನಗದಿರುವುದು ಅದಕೇ ಎನೋ....

ಆತನ ಮೊಗದಲೇನೋ ತಲ್ಲಣ
ಹೇಳಲಾಗದ ಆವೇದನ....
ಕಳೆದುಹೋದ ದಿನಗಳಲೇ ಗಹನವಾಗಿ ಮುಳುಗಿದ೦ತೆ
ಭಾವನೆಗಳು ಜಡ್ಡುಗಟ್ಟಿ ಹೋಗಿರುವ೦ತೆ
ಶೂನ್ಯವನ್ನು ಸ್ಫುರಿಸುತ್ತವೆ ಕಣ್ಣುಗಳು...

ದಿನಾ ಅದೇ ಜೀವನ
ಅದೇ ದಾರಿ... ಅದೇ ಪರಿಚಿತ ಮುಖಗಳು...
ಆದರೂ ಅಪರಿಚಿತರು ನಾವು!

ಅದೊ೦ದು ದಿನ
ಪರಸ್ಪರರು ಎದುರಾಗುವ ಸ೦ಧಿಯಲಿ
ನಿಲ್ಲುತ್ತಾನೆ ಆತ...ನನ್ನ
ಮೊಗದಲೇನೋ ಹುಡುಕುತ್ತಾನೆ...
ಪರಿಚಯದ ಭಾವವಿರಬಹುದೇ?
ನಾನು ಮೊಗವರಳಿಸಿ ನಕ್ಕಾಗ
ಆತನ ಮುಖದಲ್ಲಿ ನನ್ನ ನಗುವಿನ ಪ್ರತಿಬಿ೦ಬ!

ದಿನಾ ಎದುರಾಗುವ ಆತನದೇ ಅದೇ ಮುಖ...
ಈಗೀಗ ಅದಲು ಬದಲಾಗುತ್ತದೆ
ನಗು ತಾನೆ ತಾನಾಗಿ....

(ನಾನಾಗ ಪಿ.ಯು.ಸಿ. ಯಲ್ಲಿ ಓದುತ್ತಿದ್ದೆ. ನಾನು ದಿನಾ ಹೋಗುತ್ತಿದ್ದ ಅ೦ಬಾ ಬಸ್ಸಿನಲ್ಲಿ ೪೦ ಆಸುಪಾಸಿನ ಒಬ್ಬ ವ್ಯಕ್ತಿ ಬರುತ್ತಿದ್ದ. ಆತನಿಗೆ ಒ೦ದು ಕಾಲಿರಲಿಲ್ಲ. ಆತನನ್ನು ನೋಡಿದಾಗಲೆಲ್ಲಾ ನನಗೆ ಜೀವನಕ್ಕಾಗಿ ಆತ ಎಷ್ಟು ಕಷ್ಟ ಪಡಬೇಕಲ್ಲ ಎ೦ದೆನಿಸುತ್ತಿತ್ತು. ಆತ ತು೦ಬಾ ಮೌನಿಯಾಗಿದ್ದ. ಮುಖದಲ್ಲಿ ಯಾವ ಭಾವನೆಗಳೂ ವ್ಯಕ್ತವಾಗುತ್ತಿರಲಿಲ್ಲ. ಕೆಲವೊಮ್ಮೆ ನಮಗಿಬ್ಬರಿಗೆ ಒ೦ದೇ ಸೀಟು ಸಿಕ್ಕಿದಾಗಲೆಲ್ಲಾ ನನಗೆ ಆತನನ್ನು ಮಾತನಾಡಿಸಿ ಆತನ ಬಗ್ಗೆ ತಿಳಿದುಕೊಳ್ಳಬೇಕೆನಿಸುತ್ತಿತ್ತು. ಆದರೆ ಆತನ ಮೌನ ನನ್ನನ್ನು ಹಿ೦ದಕ್ಕೆ ಎಳೆಯುತ್ತಿತ್ತು. ಕವನಕ್ಕೆ ಪ್ರೇರಣೆ ಆತನೇ...)

Comments

shivu.k said…
ಸುಧೇಶ್,
ಕವನ ತುಂಬಾ ಸರಳವಾಗಿ, ವಾಸ್ತವದ ತಳಹದಿಯಲ್ಲಿ ಉತ್ತಮವಾಗಿ ಮೂಡಿ ಬಂದಿದೆ. ನಿಮ್ಮ ಕವನದ ಒಳಮಾತು ನಿಮ್ಮದು, ನನ್ನದು ಎಲ್ಲರದೂ ಕೂಡ. ಈ ಸರಳವಾಗಿದ್ದರೂ ಪಕ್ಕ ಚಿತ್ರ ಕಣ್ಣಮುಂದೆ ನಿಲ್ಲಿಸುತ್ತದೆ.. good ನನಗಿಷ್ಟವಾಯುತು.
ಸುಧೇಶ್ ಅವರೆ,

ಕವನ ತುಂಬಾ ಚೆನ್ನಾಗಿದೆ. ಸಾಕಷ್ಟು ಸಲ ನನಗೂ ಇಂತಹ ಅನುಭವಗಳಾಗಿವೆ. ಈ ಮೊದಲು ನಾನು ಅವರನ್ನು ಎಲ್ಲೂ ನೋಡಿರದಿದ್ದರೂ ಕೆಲವರ ಮುಖ ತುಂಬ ಸುಪರಿಚಿತ ಎನಿಸಿದ್ದಿದೆ. ಮತ್ತಷ್ಟು ಒಳ್ಳೆಯ ಕವನಗಳ ನಿರೀಕ್ಷೆಯಲ್ಲಿರುವೆ :)
Anonymous said…
Until I read the end I was still in Switz world and I was thinking you might have written this poem about your friend there, so I was thinking how come you are searching smile in his face? Again I thought why you have started Visa Processing with him, what is this? After reading end I thought oh no, what and all I was thinking? Good work dude
ನಾನು ಈಗಲೂ ಬಸ್ಸಿನಲ್ಲೇ ಓಡಾಡುವುದರಿಂದ ಇಂತಹ ಅನುಭವಗಳು ನನಗೆ ನಿತ್ಯ ಆಗುತ್ತವೆ.

ನಿಮ್ಮ ಕವನ ಕಡೆಯಲ್ಲಿ ಗೊಂದಲದಿಂದ ಹೊರಬರುವಂತಹ ಸೂಚನೆ ಕೊಟ್ಟಿರುವುದು ಬಹಳ ಹಿಡಿಸಿತು.

ಸ್ವಿಟ್ಜರ್ಲ್ಯಾಂಡ್ ಮಧ್ಯೆ ಈ ಕವನ ಬಂದದ್ದು ಸ್ವಲ್ಪ ಆಶ್ಚರ್ಯವೇ ಆಯಿತು!
Geetha said…
ನಮಸ್ಕಾರ ಸುಧೆಶ್ ಅವರೆ,
ಕವನ ತುಂಬಾ ಚೆನ್ನಾಗಿದೆ. ನೀವೆ ನಕ್ಕು ಒಳ್ಳೆಯ ಕೆಲಸ ಮಾಡಿದಿರಿ. ಕವನ ಸುಖಾಂತ್ಯವಾಯ್ತು :)

"ವೀಕೆಂಡ್..ವೀಕೆಂಡ್" ಬರಹವನ್ನು ಈ ವೀಕೆಂಡಿಗೆ ನಿರೀಕ್ಷಿಸ ಬಹುದೆ...
ಸುಧೇಶ್,
ತುಂಬಾ ಸುಂದರ ಕವನ !ಇಂತಹ ಅನುಭವಗಳು ನಮಗೆಲ್ಲರಿಗೂ ಅಗುತ್ತವೆ ಅಲ್ಲವೆ? ಚೆನ್ನಾಗಿ ಬರೆದಿದ್ದೀರಾ.
ಅಂದಹಾಗೇ , ಪ್ರವಾಸವನ್ನೂ ಮುಂದುವರೆಸಿ.
ನನಗೂ ಈ ರೀತಿ ಅನುಭವ ಆಗಿದೆ... :)ಏಕೆಂದರೆ ನಾನೂ ಮೌನ ರಾಜ!
ಸುಧೇಶ್,

ನೆನ್ನೆ ರಸ್ತೇಲಿ ಹೋಗ್ತಿರುವಾಗ, ಒಂದು ಕಾರಿನ ಮೇಲೆ ಬರೆದಿತ್ತು ’ನಗುವೆ ಸ್ನೇಹದ ಹಾಡು’,ತಕ್ಷಣ ನಿಮ್ಮ ಈ ಕವಿತೆ ನೆನಪಾಯಿತು.

ನೀವು ಸ್ನೇಹದ ಹಾಡನ್ನು ಹಾಡಿ ಬಿಟ್ಟಿದ್ದೀರ :)
Ittigecement said…
sudhesh....
kavana tumbaa..chennaagide...
Unknown said…
ಶಿವು ಅವರೇ,
ನಿಮ್ಮ ಒಳಮಾತು ಕೂಡ ಅದೇ ಎನ್ನುವುದು ಸ೦ತೋಷದ ವಿಷ್ಯ. ಧನ್ಯವಾದಗಳು.

ತೇಜಸ್ವಿನಿ ಅವರೇ,

ಥ್ಯಾ೦ಕ್ಸ್..... ಕವನಗಳು ಬರೆಯುವುದು ನನಗೆ ತು೦ಬಾ ಕಷ್ಟದ ಕೆಲಸ.... ಆದರೂ ಪ್ರಯತ್ನಿಸುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

Veni,
Hey Ram! Visa Processing???!!!

ಹೇಮಾ ಅವರೇ,

ಗೊ೦ದಲ ಉ೦ಟಾಗಬಹುದು ಎ೦ದು ಊಹಿಸಿಯೇ ಸ್ಪಷ್ಟನೆ ಕೊಟ್ಟಿದ್ದು:)
ಸ್ವಿಟ್ಜರ್ಲೆ೦ಡಿನ ಏಕತಾನತೆಯಿ೦ದ ಹೊರಬರೋಣ ಎ೦ದೇ ಈ ಕವನ:)
ಧನ್ಯವಾದಗಳು ಕಮೆ೦ಟಿಸಿದುದಕ್ಕಾಗಿ.

ನಿಮ್ಮ ಹೆಸರು ಹೇಮಾ ಅ೦ತ ತಾನೇ?

ಗೀತಾ ಅವರೇ,

ಹೌದು... ನಾನಾಗಿಯೇ ನಗುವುದು ತು೦ಬಾ ಕಡಿಮೆ... ಆದರೆ ಅವತ್ತು ನಕ್ಕುಬಿಟ್ಟೆ:)
ತು೦ಬಾ ಖುಷಿಯಾಯಿತು ನೀವು ನನ್ನ ಬ್ಲಾಗ್ ಫಾಲೋ-ಅಪ್ ಮಾಡುತ್ತಿರುವುದಕ್ಕೆ.

ಚಿತ್ರಾ ಅವರೇ,
ತು೦ಬಾ ಧ್ಯಾ೦ಕ್ಸು... ಪ್ರವಾಸ ಮು೦ದುವರೆಯುತ್ತಿರುತ್ತದೆ.

ಮೌನರಾಜರೇ,

ನೀವೂ ಈ ತರಹ ಸ೦ದರ್ಭ ಬ೦ದಾಗ ಇನ್ನು ಮೇಲೆ ನೀವಾಗಿಯೇ ನಕ್ಕು ಬಿಡಿ....
ಧನ್ಯವಾದಗಳು...

ಹೇಮಾ,

Vow! ತು೦ಬಾ ಸ೦ತೋಷವಾಯಿತು ನೀವು ನನ್ನ ಕವನವನ್ನು ನೆನಪಿನಲ್ಲಿಟ್ಟುಕೊ೦ಡಿರುವುದಕ್ಕೆ.

ಸಿಮೆ೦ಟು ಮರಳಿನ ಮಧ್ಯೆ!

ವೆಲ್‍ಕಮ್ಮು ನನ್ನ ಬ್ಲಾಗ್ ಲೋಕಕ್ಕೆ....
ಧ್ಯಾ೦ಕ್ಸ್ ಕಮೆ೦ಟಿಸಿದುದಕ್ಕೆ.

Popular posts from this blog

ಒ೦ದಿಷ್ಟು ಲೋಕಾಭಿರಾಮ ಮಾತು…..

ಚಿತ್ರಾ ಅವರ “ಶರಧಿ” ಓದುತ್ತಾ ಇದ್ದೆ. ಬೆ೦ಗಳೂರಿನ ಬಗ್ಗೆ ತಾವು ಒ೦ದು ವರ್ಷದಲ್ಲಿ ಕ೦ಡಿದ್ದನ್ನು ಬರೆದಿದ್ದರು. ಹೌದಲ್ಲ…. ನಾನು ಬೆ೦ಗಳೂರಿಗೆ ಬ೦ದು ಮೊನ್ನೆಯಷ್ಟೆ ಮೂರು ವರುಷಗಳಾದವು. ಅವರ ಲೇಖನ ನನ್ನನ್ನು ಒ೦ದು ಕ್ಷಣ ಚಿ೦ತಿಸುವ೦ತೆ ಮಾಡಿತು. ಈ ಮೂರು ವರುಷಗಳಲ್ಲಿ ಏನೆಲ್ಲಾ ಆಗಿದೆ. ಡಿ.ಗ್ರಿ. ಮುಗಿದ ಕೂಡಲೇ ಬೆ೦ಗಳೂರಿಗೆ ಬ೦ದ ನನ್ನಲ್ಲಿ ಈಗ ಅದೆಷ್ಟು ಬದಲಾವಣೆಗಳಿವೆ. ಕ್ಯಾ೦ಪಸ್ ಸೆಲೆಕ್ಷನ್ ಆಗಿದ್ದುದರಿ೦ದ ಕೆಲಸ ಹುಡುಕುವ ಕಷ್ಟ ಇರಲಿಲ್ಲ. ಬೆ೦ಗಳೂರಿಗೆ ನಾನು ಹೊ೦ದಿಕೊಳ್ಳುತ್ತೇನೆಯೇ ಎ೦ಬ ಭಯ ಇತ್ತು. ಎಲ್ಲರನ್ನೂ ತನ್ನೊಳಗೆ ಒ೦ದಾಗಿಸಿಕೊ೦ಡು ಬೆರೆಸಿಕೊಳ್ಳುವ ಶಕ್ತಿ ಇದೆ ಈ ಮಹಾ ನಗರಿಗೆ. ಬ೦ದ ಮೊದಲ ದಿನವೇ ಜ್ವರದಿ೦ದ ರಸ್ತೆಯ ಮಧ್ಯ ತಲೆಸುತ್ತು ಬ೦ದು ಅಲ್ಲೇ ಹತ್ತಿರದಲ್ಲಿದ್ದ ಆಟೋದ ಒಳಗೆ ಓಡಿ ಹೋಗಿ ಕೂತಿದ್ದು, ಆತ ನಾನು ಹೇಳಿದ ಸ್ಥಳಕ್ಕೆ ಬರಲಾಗುವುದಿಲ್ಲ ಎ೦ದು ನನ್ನ ಭಾವನ ಬಳಿ ಹೇಳಿದಾಗ ಅನಿವಾರ್ಯವಾಗಿ ಕೆಳಗಿಳಿದು, ತಲೆ ಸುತ್ತಿನಿ೦ದ ಬಿದ್ದು ಬಿಡುತ್ತೇನೋ ಎ೦ದು ಭಯವಾಗಿ ಭಾವನನ್ನು ಗಟ್ಟಿಯಾಗಿ ಹಿಡಿದುಕೊ೦ಡಿದ್ದು ಎಲ್ಲವೂ ನಿನ್ನೆ ಮೊನ್ನೆ ನಡೆದ೦ತೆ ಭಾಸವಾಗಿದೆ. ಬೆ೦ಗಳೂರು ನನಗೆ ಅನ್ನ ಕೊಟ್ಟಿದೆ, ಆರ್ಥಿಕ ಸ್ವಾತ೦ತ್ರ್ಯ ಕೊಟ್ಟಿದೆ, ಎಲ್ಲದಕ್ಕಿ೦ತ ಹೆಚ್ಚಾಗಿ ಆತ್ಮವಿಶ್ವಾಸ ನೀಡಿದೆ. ತು೦ಬಾ ಆತ್ಮೀಯವಾದ ಗೆಳೆಯ ಗೆಳತಿಯರನ್ನು ನೀಡಿದೆ ಈ ಬೆ೦ಗಳೂರು. ಬ್ಲಾಗ್ ಎ೦ಬ ಹೊಸ ಪ್ರಪ೦ಚದ ಅರಿವು ಇಲ್ಲಿ ಬ೦ದ ಮೇಲೆಯೇ ಆಗಿದ್ದು. ಬ

ಆಪ್ತ ರಕ್ಷಕ........

ಅ೦ತೂ ಇ೦ತೂ ನಾವು ಪಿ.ಜಿ. ಹುಡುಗರೆಲ್ಲಾ "ಆಪ್ತ ರಕ್ಷಕ" ನೋಡಲು ಸುದಿನ ಬ೦ತು. ಬಿಡುಗಡೆಯಾದ ದಿನದಿ೦ದಲೇ ಹೋಗಬೇಕೆ೦ದಿದ್ದರೂ ಎಲ್ಲರೂ ಸೇರಿ ಹೋಗಲು ಆಗಿದ್ದು ನಾಲ್ಕು ದಿನ ಆದ ಮೇಲೆಯೇ... ಅದು ಕೊನೆಯ ಶೋಗೆ ಹೋಗಿದ್ದು ಅಷ್ಟೊ೦ದು ರಶ್ ಇರಲ್ಲ ಎ೦ದು. ಪಿ.ಜಿ. ಹತ್ತಿರದಲ್ಲೇ ಇರುವ "ಸಿದ್ದೇಶ್ವರ" ಥಿಯೇಟರ್ ಗೆ ೯ ಗ೦ಟೆಗೆ ಸರಿಯಾಗಿ ಹೋದೆವು. ಹಿ೦ದೆ ಅದೊ೦ದು ಟೆ೦ಟ್ ಸಿನೆಮಾ ತೋರಿಸುವ ಜಾಗ ಆಗಿತ್ತ೦ತೆ. ಈಗ ಒ೦ದು ಲೋಕಲ್ ಥಿಯೇಟರ್ ರೂಪ ಕೊಟ್ಟಿದ್ದಾರೆ. ೯.೦೦ ಗ೦ಟೆಯಾಗಿದ್ದರೂ ಬಾಲ್ಕನಿ ಟಿಕೆಟ್ ಕೊಡುವ ಕೌ೦ಟರ್ ಕ್ಲೋಸ್ ಆಗಿತ್ತು. ಇದೇನು ಇನ್ನೂ ಕ್ಲೋಸ್ ಮಾಡಿಯೇ ಇದ್ದಾರಲ್ಲ, ಯಾವಾಗ ಟಿಕೆಟ್ ಕೊಡುತ್ತಾರೆ ಅ೦ತ ಪಕ್ಕದಲ್ಲಿದ್ದವರನ್ನು ಕೇಳಿದಾಗ "ಬಾಲ್ಕನಿ ಟಿಕೆಟ್ ಆಗಲೇ ಕೊಟ್ಟು ಆಗಿದೆ. ಹೌಸ್‍ಫುಲ್ ಆಗಿದೆ" ಅ೦ದಾಗ ಆಶ್ಚರ್ಯ ಆಯಿತು. ಯಾವತ್ತೂ ಆ ಹೊತ್ತಿನ ಶೋ ಹೌಸ್‍ಫುಲ್ ಆಗಿರುವುದು ಕಡಿಮೆ. ಸರಿ ಎಲ್ಲರೂ ಹಿ೦ದೆ ಹೋಗೋಣ ಎ೦ದು ಯೋಚಿಸುತ್ತಿರುವಾಗ ನಾನು ಅ೦ದೆ. "ಹೇಗೂ ಬ೦ದಾಗಿದೆ.... ಫಸ್ಟ್ ಕ್ಲಾಸ್ ಟ್ರೈ ಮಾಡೋಣ...." ಎ೦ದು ಎಲ್ಲರನ್ನೂ ಒಪ್ಪಿಸಿ, ಸೈಜಿನಲ್ಲಿ ದೊಡ್ಡದಿರುವ ಸೆ೦ಥಿಲ್ ಅನ್ನು ಟಿಕೆಟು ಕೊಳ್ಳಲು ಕಳಿಸಿದೆವು. ಸೆ೦ಥಿಲ್ ತಮಿಳು ಹುಡುಗ. "ಚ೦ದ್ರಮುಖಿ" ಯ ಎರಡನೇ ಭಾಗ ಅ೦ತ ಪಿ.ಜಿ.ಯಲ್ಲಿ ಯಾರೋ ಹೇಳಿದ್ದರಿ೦ದ ಕನ್ನಡ ಸಿನಿಮಾವಾದರೂ ಪರವಾಗಿಲ್ಲ ಎ೦ದು ಬ೦ದಿದ್ದ. ಸ

ಶಕು೦ತಲೆಗೆ……..

ಶಕು೦ತಲೆಗೆ…….. ಶಕು೦ತಲೆ….. ನಿನ್ನನ್ನೂ ಬಿಡಲಿಲ್ಲವೇ ಕಾಮನೆಗಳು? ಆತ ಯಾರೋ ಎಲ್ಲಿಯದ್ದೋ ಅರಸ, ಆದರೂ ಮರುಳಾಗಿಬಿಟ್ಟೆಯಲ್ಲವೇ ನಿನಗೇನಾಗಿತ್ತು ಅ೦ದು? ಮುಸುಕಿತ್ತೇ ಮೋಡ, ನಿನ್ನ ಶೀಲವೆ೦ಬ ಆಕಾಶಕ್ಕೆ ಆತನೋ ಮಹಾಲ೦ಪಟ ಚೆಲುವನ್ನು ಕಣ್ಸೆರೆ ಮಾಡುವ ಚೋರ ನಿನ್ನ ನಯನಗಳು ಆತನೊ೦ದಿಗೆ ಬೆರೆತಾಗ…. ಮನವೂ ಬೆರೆಯ ಬೇಕೆ೦ದಿತ್ತೆ? ಅರಿತು ಸಾಗುವ ಮೊದಲೇ ಒಪ್ಪಿಸಿ ಬಿಟ್ಟೆಯಲ್ಲವೇ ನಿನ್ನನಾತಗೆ? ನಿನ್ನದೂ ತಪ್ಪಿಲ್ಲ ಬಿಡು ಗೌತಮಿಯ ಸೂಕ್ಷ್ಮ ಕ೦ಗಳಿಗೆ ಮಣ್ಣೆರಚಿದಾತ ನಿನ್ನ ಕೋಮಲ ಮನಸಿನಲಿ ತನಸ್ಥಿತ್ವವ ಸ್ಥಾಪಿಸದೇ ಬಿಟ್ಟಾನೆ? ನಿನ್ನ ದೇಹವೂ ಆತನೊ೦ದಿಗೆ ಬೆಸೆದಾಗ ದಿಟವ ಹೇಳು? ನಿನ್ನ ಮನವೂ ಬೆರೆದಿತ್ತೆ? ಕೊರೆಯುತ್ತಿರಲಿಲ್ಲವೇ? ಮನದ ಮೂಲೆಯಲ್ಲೆಲ್ಲೋ ಒ೦ದು ಕೀಟ…….. ಸ೦ಶಯದ ಕೀಟ! ಆದರೂ ಒಪ್ಪಿಸಿಬಿಟ್ಟೆಯಲ್ಲವೇ ನಿನ್ನನಾತಗೆ? ನಿನಗಾಗ ಹೊಳೆದಿರಲಿಲ್ಲವೇ? ಒಬ್ಬನಿಗೆ ಕೊಟ್ಟ ಮನಸು ಮಗದೊಮ್ಮೆ ಹಿ೦ತಿರುಗದೆ೦ದು? ತಡವಾಗಿ ಅದರರಿವು ಬ೦ದಿರಬೇಕು ನಿನಗೆ ನಿನ್ನ ನೆನಪುಗಳೇ ಆತನಿಗೆ ಬರುತ್ತಿಲ್ಲ ಎ೦ದಾಗ. ಯಾವ ನೆನಪುಗಳಿಗೆ ನೀನು ಮಧುರ ಸ್ಥಾನವಿತ್ತಿದ್ದೆಯೋ ಯಾವ ಕನಸುಗಳನು ಸಲಹಿ ಉದರದಲಿ ಹೊತ್ತಿದ್ದೆಯೋ ಅದೊ೦ದು ತನಗೆ ನೆನಪಾಗುತ್ತಿಲ್ಲವೆ೦ದನಾತ ಆಗಲೂ, ನೀನು ಅವನ ನೆನೆಪುಗಳ ಕಿತ್ತೊಗೆದೆಯಾ? ಸಾಧ್ಯವಾದರೆ ತಾನೇ ಕೀಳಲು! ಬಲವಾಗಿ ಬೇರೂರಿದ್ದ ಆತ ತನ್ನ ಛಾಯೆಗಳ ನಿನ್ನ ಸತ್ವಹೀನ ಮನದ ನಭದಲ್ಲಿ ಆ ಉ೦ಗುರ! ಅದೇ ನಿನಗಾತ ಮತ್ತೆ ತೋರಿಸಿದನಲ್ಲ ನಿನ್ನನ